ವಾರ್ಷಿಕ ಕ್ರೀಡಾಕೂಟ

“ಇಂದಿನ ಯುವಜನತೆಯಲ್ಲಿ ಕ್ರೀಡಾಮನೋಭಾವ ಬೆಳೆದರೆ ಜೀವನದ ಪ್ರತಿಕೂಲ ಪರಿಸ್ಥಿತಿಯಲ್ಲೂ ಅವರು ಛಲಬಿಡದೆ ಸಾಧನೆ ಮಾಡಿಜೀವನವನ್ನು ರೂಪಿಸಿಕೊಳ್ಳುತ್ತಾರೆ.ಇಂತಹ ಸುದೃಢ ಮನಸ್ಸಿನ ನಾಗರಿಕರೇ ಸ್ವಸ್ಥ ಸಮಾಜದ ರೂವಾರಿಗಳು.ಅದಕ್ಕಾಗಿ ಕ್ರೀಡೆಗಳು ಶಿಕ್ಷಣದ ಅವಿಭಾಜ್ಯಅಂಗವಾಗಿರಬೇಕು.“ ಎಂದು ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಸುನೀತಾ ಎಮ್. ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ 2022-23 ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ,ಅವರು ಮಾತನಾಡಿದರು.

ವಿದ್ಯಾರ್ಥಿಗಳ ವಿವಿಧ ತಂಡಗಳ ಶಿಸ್ತುಬದ್ಧ ಪಥಸಂಚಲನ ನಡೆಯಿತು.ಅತಿಥಿಗಳು ಗೌರವ ವಂದನೆ ಸ್ವೀಕರಿಸಿದರು.


ಕಾರ್ಯಕ್ರಮದ ಮುಖ್ಯಅತಿಥಿಯಾದ ಪಾಪೆಮಜಲು ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಮತಿ ಪ್ರವೀಣ ರೈ ಬಿ.ರವರು ಮಾತನಾಡಿ,”ಕ್ರಮಬದ್ಧವಾದರೀತಿಯಲ್ಲಿ ಜೀವನವನ್ನು ಕಾಪಾಡಿಕೊಳ್ಳಲು ನಮ್ಮ ದೇಹವು ಬಹಳ ಮುಖ್ಯವಾದಂತೆಯೇ ನಮ್ಮ ದೇಹದ ಸಂಪೂರ್ಣ ಬೆಳವಣಿಗೆಗೆ ವ್ಯಾಯಾಮವೂ ಬಹಳ ಮುಖ್ಯ.ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ನಮ್ಮ ದೇಹವು ಉತ್ತಮ ವ್ಯಾಯಾಮವನ್ನು ಪಡೆಯುತ್ತದೆ.ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಯಲ್ಲಿ ಇದು ಬಹಳ ಮುಖ್ಯವಾಗಿದೆ.“ಎಂದು ಹೇಳಿದರು.


ಜಿಲ್ಲಾ ,ರಾಜ್ಯ ಮತ್ತು ರಾಷ್ಟ್ರಮಟ್ಟದ ವಿವಿಧಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸುಪ್ರೀತಾ,ಕೃತಜ್ಞಾ,ಪ್ರಥಮ ವಿಜ್ಞಾನ ವಿಭಾಗದ ಮನೀಷಾ,ಸೃಜನ್ ,ಪ್ರಥಮ ವಾಣಿಜ್ಯ ವಿಭಾಗದ ಯಶಸ್ವಿನಿ ಇವರು ಕ್ರೀಡಾಜ್ಯೋತಿಯನ್ನುತರುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ವಿವೇಕಾನಂದಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ಆಕರ್ಷಕ ಬ್ಯಾಂಡ್ ಸೆಟ್ ಪಥಸಂಚಲನ ಕಾರ್ಯಕ್ರಮಕ್ಕೆ ವಿಶೇಷ ಮೆರುಗನ್ನು ನೀಡಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯನಾಥ ಆಳ್ವ ರವರು ಮಾತನಾಡುತ್ತಾ “ವಿದ್ಯಾರ್ಥಿಗಳಲ್ಲಿ ಕ್ರೀಡೆಯು ಸ್ನೇಹ ಮತ್ತುಒಗ್ಗಟ್ಟಿನ ಭಾವನೆಯನ್ನುಉತ್ತೇಜಿಸಲು ಸಹಾಯ ಮಾಡುತ್ತದೆ.ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಆತ್ಮವಿಶ್ವಾಸದ ಜೊತೆಗೆ ಸುಧಾರಣೆ,ಸಾಧನೆ ಮತ್ತು ವೈಯಕ್ತಿಕ ಪ್ರಗತಿಯ ಭಾವನೆಗಳನ್ನು ಬೆಳೆಯುವುದರಿಂದ ಉತ್ತಮ ಮತ್ತುಉಜ್ವಲ ಭವಿಷ್ಯಕ್ಕೆ ಸಾಕ್ಷಿಯಾಗುತ್ತದೆ.“ಎಂದು ಹೇಳಿದರು.